ಜಗತ್ತಿನ ಮೊತ್ತಮೊದಲ ಲವ್ ಲೆಟರ್ ಬರೆದವರು ಯಾರು ಗೊತ್ತೇ?
ಹೇಳುವೆ ಕೇಳಿ.....
ವಿದರ್ಭ ಎಂಬ ರಾಜ್ಯ, ಅಲ್ಲಿ ಭೀಷ್ಮಕ ಎಂಬ ದೊರೆ, ಆತನಿಗೆ ರುಕ್ಮಿಣಿ ಎಂಬ ಮಗಳು. ಅಂದಿನ ಕಾಲಕ್ಕೆ ದ್ರೌಪದಿಯನ್ನು ಬಿಟ್ಟರೆ ಅತಿ ಸುಂದರಳಾಗಿದ್ದವಳು. ಜಾಣೆ.!
ಜರಾಸಂಧ ಅಂತ ಇದ್ದ, ಇವನ ಇಬ್ಬರು ಹೆಣ್ಣು ಮಕ್ಕಳನ್ನು ಕಂಸನಿಗೆ ಕೊಟ್ಟು ಮದುವೆ ಮಾಡಿದ್ದ. ಅದೇ ಶ್ರೀಕೃಷ್ಣ ಗುದ್ದು-ಕೆಡವಿ ಕೊಂದನಲ್ಲಾ ಅವನೇ, ಅವನು ಶ್ರೀಕೃಷ್ಣನ ಮೇಲಿನ ಸೇಡಿಗೆ ಪುಡಿ ರಾಜರನ್ನೆಲ್ಲಾ ಒಂದು ಮಾಡಿ #ಮಹಾಘಟಬಂಧನ ಮಾಡಲು ನೋಡಿದ. ಈ ರುಕ್ಮಿಣಿಯ ಅಣ್ಣ ರುಕ್ಮೀ ಯ ಗೆಳೆತನ ಮಾಡಿ, ತನ್ನ ರಾಜಕೀಯ ಲಾಭಕ್ಕೋಸ್ಕರ ಚೇದಿ ರಾಜ ಶಿಶುಪಾಲನಿಗೆ ಆಕೆಯನ್ನು ಮದುವೆ ಮಾಡಿಸಲು ನೋಡಿದ. ಇಂದಿಗೂ ನಡೆಯುವವು ಲೆಕ್ಕಾಚಾರದ ಮದುವೆಗಳೇ, ರಗಳೆ ಏಕೆ ಎಂದರೆ ಲೆಕ್ಕಾಚಾರದವು ಹಾಗೆಯೇ, ಭಯಂಕರ ಲೆಕ್ಕಾಚಾರ ಮಾಡಿ ಮದುವೆ ಮಾಡಿದರೂ ಜಗಳ, ಹಾದಿ-ಬೀದಿ ರಂಪ, ಡೈವೋರ್ಸ್, ಆತ್ಮಹತ್ಯೆ, ಹತ್ಯೆ ಯಾಕೆ ನಡೆಯುತ್ತವೆ? ಯೋಚಿಸಬೇಡವೇ?
ವಿಷಯ ತಿಳಿದ ರುಕ್ಮಿಣಿ ಈ ಬಲವಂತದ ಮದುವೆಯಿಂದ ಪಾರಾಗಬೇಕೆಂದು ಎಣಿಸಿ, ತಾನು ಇದುವರೆವಿಗೂ ನೋಡದಿದ್ದ, ಬರಿ ಅವರಿವರಿಂದ ಕೇಳಿ ತಿಳಿದಿದ್ದ ಶ್ರೀಕೃಷ್ಣನಿಗೆ ಪತ್ರವೊಂದನ್ನು ಬರೆಯುತ್ತಾಳೆ. ಹೆಣ್ಣುಗಳು ಹಾಗೆಯೇ ಎಲ್ಲರ ಬಗ್ಗೆ ತಿಳಿದಿರುತ್ತವೆ. ಕೆಲವೊಮ್ಮೆ ಕೇಳಿದ ಸುಳ್ಳುಗಳನ್ನೂ ನಂಬಿರುತ್ತವೆ.
ರುಕ್ಮಿಣಿ ಜಾಣೆ, "ಶ್ರುತ್ವಾ ಗುಣಾನ್, ಭುವನ ಸುಂದರ ! ಶೃಣ್ವತಾಂ ತೇ, ನಿರ್ವಿಶ್ಯ ಕರ್ಣ ವಿವರೈಃ ಹರತೋಂಗತಾಪಂ..." ಎಂದು ಬರೆಯಲು ಆರಂಭಿಸಿದಳು. ಭುವನ ಸುಂದರನೇ ಎಂದು, ಆತ ಭುವನ ಸುಂದರನೇ ಇದ್ದ, ಗುಣವಂತನೂ, ರೂಪವಂತನೂ ಆಗಿ ಆತನಿಗೆ ಒಲಿದಳು ತಾನಾಗಿ, ಈ ಆಪತ್ಕಾಲದಿಂದ ಪಾರು ಮಾಡಬೇಕಾಗಿಯೂ, ತನ್ನನ್ನು ಇಲ್ಲಿಂದ ಕರೆದುಕೊಂಡು ಹೋಗಬೇಕಾಗಿಯೂ, ತದನಂತರ ಮದುವೆ ಮಾಡಿಕೊಳ್ಳಿ ಎಂದು, ಎಲ್ಲಿ, ಯಾವಾಗ, ಹೇಗೆ ತನ್ನನ್ನು ಕರೆದುಕೊಂಡು ಹೋಗಬೇಕೆಂದು ಸಮಯಪ್ರಜ್ಞೆಯ ಪ್ರೇಮ ಪತ್ರವೊಂದನ್ನು ಬರೆದಳು. ಪತ್ರ ತಲುಪಿದಾಗ ಶ್ರೀಕೃಷ್ಣ ಪಾರು ಮಾಡಲು ತಡಮಾಡದೆ ಹೊರಟನಂತೆ, ಇದುವರೆಗೂ ನೋಡೆ ಇಲ್ಲದ ತಾನು ಮದುವೆಯಾಗುವ ರಾಜಕುಮಾರಿಯ ಕರೆತರಲು. ವ್ಹಾ.. ಎಂತಹ ಅದ್ಬುತ ಪ್ರೇಮ.!
ಏಳು ಲೋಕದ ವೀರನಿಗೆ, ಏಳು ಲೋಕೋತ್ತರ ಶ್ಲೋಕಗಳನ್ನು ಬರೆದು, ಏಳು ಹೆಜ್ಜೆ ಇಟ್ಟ ಮೊತ್ತಮೊದಲ ಪ್ರೇಮಪತ್ರ ಬರೆದ ರುಕ್ಮಿಣಿ ದೇವಿ. ರಥವನ್ನು ಹತ್ತಿಸಿಕೊಂಡು ಪಾಂಚಜನ್ಯ ಮೊಳಗಿಸಿದನಂತೆ ಪರಮಾತ್ಮ, "ತಡೆಯಿರಿ ನೋಡೋಣಾ" ಎಂದು. ಮೋಸದಿ ಮದುವೆ ಮಾಡಲೆತ್ನಿಸಿದವರ ಬಡಿದು, ಬಾಳದೇವತೆಯ ಹೃದಯದರಮನೆ ತುಂಬಿಸಿಕೊಂಡನಂತೆ ಪ್ರೇಮದ ಸಾಕಾರ ಮೂರ್ತಿ ವಾಸುದೇವ.
#ವಾಸುದೇವಾರ್ಪಣಮಸ್ತು
Post a Comment