ಜೆಡಿಎಸ್ ಮುಳುಗುವ ಹಡಗು-ಅರುಣ್ ಸಿಂಗ್

 31-08-2021


ಬೆಂಗಳೂರು: ಜೆಡಿಎಸ್ ಪಕ್ಷವು ಮುಳುಗುತ್ತಿರುವ ಹಡಗು. ಯಾರೂ ಮುಳುಗುತ್ತಿರುವ ಹಡಗಿನ ಜೊತೆಗಿರುವ ಯೋಚನೆ ಮಾಡಲು ಸಾಧ್ಯವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಕರ್ನಾಟಕದ ಉಸ್ತುವಾರಿಗಳೂ ಆದ ಶ್ರೀ ಅರುಣ್ ಸಿಂಗ್ ಅವರು ತಿಳಿಸಿದರು.



ಮೈಸೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಮುಂದಿನ ಬಾರಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಪಡೆಯಲಿದ್ದು, ಯಾವುದೇ ಪಕ್ಷದ ಜೊತೆ ಹೊಂದಾಣಿಕೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ ಅವರ ರಾಜ್ಯದ ಅತ್ಯುನ್ನತ ನಾಯಕರು. ಅವರ ರಾಜ್ಯ ಪ್ರವಾಸದಿಂದ ಪಕ್ಷಕ್ಕೆ ಒಳಿತಾಗಲಿದೆ ಎಂದರು.

ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲಾಗುವುದು ಎಂದ ಅವರು, ಪಕ್ಷವು ಯಾವುದೇ ಚುನಾವಣೆಯನ್ನು ಎದುರಿಸಲು ಸದಾ ಸಿದ್ಧವಾಗಿರುತ್ತದೆ ಎಂದು ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಸಿದ್ಧತೆ ಕುರಿತ ಪ್ರಶ್ನೆಗೆ ಉತ್ತರ ನೀಡಿದರು.

ಮುಖ್ಯಮಂತ್ರಿಯಾಗಿದ್ದ ಶ್ರೀ ಯಡಿಯೂರಪ್ಪ ಅವರ ಅವಧಿಯ ಯೋಜನೆಗಳನ್ನು ಈಗಲೂ ಮುಂದುವರಿಸಲಾಗುತ್ತಿದೆ. ಶ್ರೀ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳ ಬಗ್ಗೆ ಜನತೆಗೆ ಮಾಹಿತಿ ಕೊಡಬೇಕು ಹಾಗೂ ಸಂಘಟನೆಯನ್ನು ಬಲಪಡಿಸಲು ಇಂದಿನ ಸಭೆಯಲ್ಲಿ ತಿಳಿಸಿದ್ದಾಗಿ ಹೇಳಿದರು. ಎಲ್ಲರಿಗೂ ಸರಕಾರದ ಯೋಜನೆಗಳ ಲಾಭ ಸಿಗಬೇಕು. ಗರಿಷ್ಠ ಜನರು ಕೋವಿಡ್ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದ್ದಾಗಿ ಹೇಳಿದರು.

ಯುವಕರು, ರೈತರು, ಮಹಿಳೆಯರು ಮತ್ತು ಬಡವರಿಗಾಗಿ ಉತ್ತಮ ಯೋಜನೆಗಳನ್ನು ಶ್ರೀ ಬಸವರಾಜ ಬೊಮ್ಮಾಯಿ ಅವರ ಸರಕಾರವು ಅನುಷ್ಠಾನಕ್ಕೆ ತರಲಿದೆ ಎಂದು ಅವರು ತಿಳಿಸಿದರು. ದೇಶದ ಒಳಿತಿಗಾಗಿ ಪಕ್ಷ ಕೆಲಸ ಮಾಡುತ್ತಿದೆ. ಪಕ್ಷದ ತತ್ವ- ಸಿದ್ಧಾಂತಕ್ಕೆ ಬದ್ಧರಾಗಿ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಆದ್ದರಿಂದ ಇಲ್ಲಿ ಅಧಿಕಾರವೇ ಅಂತಿಮವಲ್ಲ ಎಂದು ಹೇಳಿದರು.

 ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಷ್ಠಾನಗೊಳಿಸುವ ಯೋಜನೆಗಳನ್ನು ಜಾತಿ ಆಧಾರದಲ್ಲಿ ನೋಡುತ್ತಿಲ್ಲ. ಅದನ್ನು “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್” ಆಧಾರದಲ್ಲಿ ನೋಡುತ್ತೇವೆ. ಪಿಎಂ ಕಿಸಾನ್, ಜಲಜೀವನ್, ಆವಾಸ್ ಯೋಜನಾ, ಜನ್‍ಧನ್ ಯೋಜನೆ -ಇವೆಲ್ಲವೂ ಎಲ್ಲರಿಗಾಗಿ ರೂಪಿಸಿದ ಯೋಜನೆಗಳು ಎಂದು ವಿವರಿಸಿದರು.

ಭಾರತ್ ಮಾಲಾ ಯೋಜನೆಯಡಿ ಕರ್ನಾಟಕಕ್ಕೆ 6,397 ಕೋಟಿ ರೂಪಾಯಿ ನೀಡಲಾಗಿದೆ. ಮೈಸೂರು- ಬೆಂಗಳೂರು ನಡುವಿನ ಹೆದ್ದಾರಿಯನ್ನು ದಶಪಥ ರಸ್ತೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಶೀಘ್ರವೇ ಕಾಮಗಾರಿ ಪೂರ್ಣವಾಗಲಿದ್ದು, ಮೈಸೂರಿನಿಂದ ಕೇವಲ 90 ನಿಮಿಷದಲ್ಲಿ ಬೆಂಗಳೂರು ತಲುಪಲು ಇದು ಪೂರಕ ಎಂದು ವಿವರಿಸಿದರು.

ವಿದೇಶಿ ನೇರ ಹೂಡಿಕೆಯ (ಎಫ್‍ಡಿಐ) ಶೇಕಡಾ 42 ಭಾಗವು ಕರ್ನಾಟಕದಲ್ಲಿ ಹೂಡಿಕೆಯಾಗುತ್ತಿದೆ. ಹಾರ್ಟಿಕಲ್ಚರ್ ಟೆಕ್ನಾಲಜಿ ಪಾರ್ಕ್, ಫುಡ್ ಪಾರ್ಕ್, ಟೆಕ್ಸ್‍ಟೈಲ್ ಪಾರ್ಕ್ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳೂ ರಾಜ್ಯದಲ್ಲಿ ಅನುಷ್ಠಾನಕ್ಕೆ ಬರಲಿವೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಮತ್ತು ಕೌಶಲ್ಯಕ್ಕೆ ಒತ್ತು ನೀಡಿದ ಕುರಿತು ಅವರು ಮೆಚ್ಚುಗೆ ಸೂಚಿಸಿದರು.

ಈ ಭಾಗದ ಗರಿಷ್ಠ ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಪಕ್ಷ ಸಿದ್ಧತೆ ನಡೆಸುತ್ತಿದೆ. ಈ ಕ್ಷೇತ್ರಗಳಲ್ಲಿ ಪಕ್ಷ ಸದೃಢವಾಗಿದೆ. ರಾಜ್ಯ ಸರಕಾರವೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಅವರು ವಿವರಿಸಿದರು.

ಕಿಸಾನ್ ಸಮ್ಮಾನ್ ಯೋಜನೆಯಡಿ ರೂ. 6 ಸಾವಿರವನ್ನು ಶ್ರೀ ನರೇಂದ್ರ ಮೋದಿ ಅವರ ಸರಕಾರ ನೀಡಿದರೆ, ಇಲ್ಲಿನ ನಮ್ಮ ಸರಕಾರವು 4 ಸಾವಿರ ರೂಪಾಯಿ ನೀಡುತ್ತಿದೆ. ಈ ಮೂಲಕ ಸರಕಾರವು ರೈತಪರ ಎಂದು ಸಾಬೀತಾಗಿದೆ. ಶ್ರೀ ಬಸವರಾಜ ಬೊಮ್ಮಾಯಿ ಅವರ ಸರಕಾರವು ಮಾಸಾಶನಗಳನ್ನೂ ಹೆಚ್ಚಿಸಿ ಬಡವರು ಮತ್ತು ಸಂಕಷ್ಟದಲ್ಲಿ ಇರುವವರ ಪರ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಕೋವಿಡ್‍ನಿಂದ ದುಡಿಯುವವರನ್ನು ಕಳೆದುಕೊಂಡ ಕುಟುಂಬಕ್ಕೆ ಪರಿಹಾರಧನ ನೀಡಲಾಗುತ್ತಿದೆ ಎಂದರು.

 ರಾಜ್ಯ ಸಚಿವರಾದ ಶ್ರೀ ಎಸ್. ಟಿ ಸೋಮಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿದ್ದರಾಜು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಮುನಿರಾಜು ಗೌಡ, ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಳಾ ಸೋಮಶೇಖರ್, ರಾಜ್ಯ ವಕ್ತಾರರಾದ ಶ್ರೀ ಎಂ.ಜಿ. ಮಹೇಶ್, ಪಕ್ಷದ ಪದಾಧಿಕಾರಿಗಳು, ಮುಖಂಡರು ಇದ್ದರು. 


Post a Comment

Previous Post Next Post