ಬೆಂಗಳೂರು ವಿಭಾಗದ ಮೊದಲ ಗುತ್ತಿಗೆ ನೀಡಲಾದ ಕಾರ್ಗೋ ಪಾರ್ಸೆಲ್ ಎಕ್ಸ್ಪ್ರೆಸ್ ರೈಲಿನ (ಪಿಸಿಇಟಿ) ಆರಂಭಿಕ ವಿಶೇಷಕ್ಕೆ ಇಂದು ಯಶವಂತಪುರ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಉದ್ಘಾಟನಾ ವಿಶೇಷವು ಯಶವಂತಪುರ (ಬೆಂಗಳೂರು) ದಿಂದ ಓಖ್ಲಾ (ಹೊಸದಿಲ್ಲಿ) ವರೆಗೆ ಸಂಚರಿಸಲಿದೆ.
ಶ್ರೀ ಅನಿಲ್ ಪವಿತ್ರನ್, ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರು, ನೈರುತ್ಯ ರೈಲ್ವೆ, ಶ್ರೀ ಹರಿ ಶಂಕರ್ ವರ್ಮಾ, ಪ್ರಧಾನ ಮುಖ್ಯ ನಿರ್ವಹಣಾ ವ್ಯವಸ್ಥಾಪಕರು, ನೈರುತ್ಯ ರೈಲ್ವೆ, ಶ್ರೀ ಶ್ಯಾಮ್ ಸಿಂಗ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಬೆಂಗಳೂರು ವಿಭಾಗ ಮತ್ತು ಶ್ರೀ ಸಂಜಯ್ ಗುಪ್ತಾ, ಎವಿಜಿ ಲಾಜಿಸ್ಟಿಕ್ಸ್ ವ್ಯವಸ್ಥಾಪಕ ನಿರ್ದೇಶಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪಿಸಿಇಟಿ ವೈಶಿಷ್ಟ್ಯಗಳು: -
ಪಾರ್ಸೆಲ್ ಕಾರ್ಗೋ ಎಕ್ಸ್ಪ್ರೆಸ್ ರೈಲು(ಪಿಸಿಇಟಿ) ಭಾರತೀಯ ರೈಲ್ವೆಯ ಒಂದು ಉಪಕ್ರಮವಾಗಿದ್ದು, 06 ವರ್ಷಗಳ ಅವಧಿಗೆ ಪಾರ್ಸೆಲ್ಗಳನ್ನು ಲೋಡ್ ಮಾಡಲು ಸಂಪೂರ್ಣ ರೈಲನ್ನು ಸುತ್ತು ಪ್ರಯಾಣದ ಆಧಾರದಲ್ಲಿ ಗುತ್ತಿಗೆಗೆ ನೀಡುತ್ತದೆ.
ಪಾರ್ಸೆಲ್ ರೈಲಿನ ಕನಿಷ್ಠ ಸಂಯೋಜನೆಯು 15 ಪಾರ್ಸೆಲ್ ವ್ಯಾನ್ಗಳು ಮತ್ತು 01 ಬ್ರೇಕ್ ವ್ಯಾನ್ ಆಗಿರುತ್ತದೆ; ಹೀಗಾಗಿ 353 ಟನ್ಗಳಷ್ಟು ವಸ್ತುಗಳನ್ನು ಒಂದೇ ಬಾರಿಗೆ ಸಾಗಿಸಬಹುದು. 06 ತಿಂಗಳ ನಂತರ ಸಂಯೋಜನೆಯು 20 ಪಾರ್ಸೆಲ್ ವ್ಯಾನ್ಗಳು ಮತ್ತು 01 ಬ್ರೇಕ್ ವ್ಯಾನ್ಗಳಾಗಿದ್ದು ಒಟ್ಟು ಸಾಮರ್ಥ್ಯ 491ಟನ್ ಆಗುತ್ತದೆ.
ಪಿಸಿಇಟಿಗಳು ತಿಂಗಳಿಗೆ ಕನಿಷ್ಠ ಎರಡು ಸುತ್ತು ಸಾಗಣೆ ನಿರ್ವಹಿಸಬೇಕಾಗುತ್ತದೆ. ಪಿಸಿಇಟಿಗಳ ಸಾರಿಗೆ ನಿರ್ವಹಣೆಯು ವೇಳಾಪಟ್ಟಿಯ ಪ್ರಕಾರ ಇರುವುದರಿಂದ ಗ್ರಾಹಕರು ತಮ್ಮ ಪಾರ್ಸೆಲ್ಗಳನ್ನು ಕಡಿಮೆ ಸಮಯದಲ್ಲಿ ಶೀಘ್ರವಾಗಿ ಸಾಗಿಸಲು ಸಾಧ್ಯವಾಗುತ್ತದೆ.
ಒಪ್ಪಂದದ ಅವಧಿಯ ಮೊದಲ 03 ವರ್ಷಗಳಲ್ಲಿ ಸರಕು ಸಾಗಣೆಯಲ್ಲಿ ಯಾವುದೇ ಏರಿಕೆ ಇರುವುದಿಲ್ಲ ಮತ್ತು 4 ನೇ ವರ್ಷದಿಂದ 10% ರಷ್ಟು ಏರಿಕೆ ಇರುತ್ತದೆ.
ಸ್ಪರ್ಧಾತ್ಮಕ ದರಗಳು ಮತ್ತು ಯಾವುದೇ ಬಜೆಟ್ ಹೆಚ್ಚಳವಿಲ್ಲದೆ, ರೈಲ್ವೇ ಮತ್ತು ಗುತ್ತಿಗೆದಾರರು ಜಂಟಿಯಾಗಿ ಪಾರ್ಸೆಲ್ ಸಾಗಣೆಯನ್ನು ರಸ್ತೆ ಸಾರಿಗೆಯಿಂದ ರೈಲ್ವೇ ಕಡೆಗೆ ಆಕರ್ಷಿಸಲು ಸಾಧ್ಯವಾಗುತ್ತದೆ.
ಈ ಉಪಕ್ರಮದ ಮೂಲಕ ರೈಲ್ವೆಯು ಪಾರ್ಸೆಲ್ ಸಾಮರ್ಥ್ಯದ ಬಳಕೆಯನ್ನು ಸುಧಾರಿಸಲು ಮತ್ತು ದೇಶಾದ್ಯಂತ ಪೂರೈಕೆ ಸರಪಳಿಗೆ ಪ್ರಮುಖ ಉತ್ತೇಜನವನ್ನು ನೀಡಲು ಸಾಧ್ಯವಾಗುತ್ತದೆ.
ನೈಋತ್ಯ ರೈಲ್ವೆ, ಬೆಂಗಳೂರು ವಿಭಾಗವು ಪಿಸಿಇಟಿಯನ್ನು ಮೆ. ಎವಿಜಿ ಲಾಜಿಸ್ಟಿಕ್ಸ್ ನಿಯಮಿತ ಸಂಸ್ಥೆಗೆ ಬೆಂಗಳೂರಿನಿಂದ (ಯಶವಂತಪುರ) ದೆಹಲಿಗೆ (ಓಖ್ಲಾ) ಮತ್ತು ಹಿಂದಕ್ಕೆ ವಾರಕ್ಕೆ 02 ಸುತ್ತಿನ ಪ್ರಯಾಣವನ್ನು ಗುತ್ತಿಗೆ ನೀಡಿದೆ. 06 ವರ್ಷಗಳ ಒಪ್ಪಂದದ ಒಟ್ಟು ಮೌಲ್ಯವು ರೂ.241 ಕೋಟಿಗಳಾಗಿರುತ್ತದೆ.
ಸಾರ್ವಜನಿಕ ಸಂಪರ್ಕಾಧಿಕಾರಿ.
Post a Comment