ರಾಜ್ಯದಲ್ಲಿ 2022-23ನೇ ಸಾಲಿನ ಪೂರ್ವ ಬಾಲ್ಯಾವಸ್ಥೆ ( ಅಂಗನವಾಡಿ) ಹಂತದಿಂದಲೇ 'ರಾಷ್ಟ್ರೀಯ ಶಿಕ್ಷಣ ನೀತಿ-2020' ಅನುಷ್ಠಾನಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಬೆಂಗಳೂರು, ಏ.29: ರಾಜ್ಯದಲ್ಲಿ 2022-23ನೇ ಸಾಲಿನ ಪೂರ್ವ ಬಾಲ್ಯಾವಸ್ಥೆ ( ಅಂಗನವಾಡಿ) ಹಂತದಿಂದಲೇ 'ರಾಷ್ಟ್ರೀಯ ಶಿಕ್ಷಣ ನೀತಿ-2020' ಅನುಷ್ಠಾನಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ರಾಷ್ಟ್ರೀಯ ಶಿಕ್ಷಣ ನೀತಿ-2020' ಅನುಸಾರ ರಚನೆಯಾಗುವ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಅಭಿವೃದ್ಧಿಗೆ ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ಒಳಗೊಂಡ ದಾಖಲೆಯನ್ನು (Mandate Document) ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್ ಬಿಡುಗಡೆ ಮಾಡಿದರು. ಈ ಸಮಾರಂಭ ಉದ್ದೇಶಿಸಿ ಶಿಕ್ಷಣ ಸಚಿವರು ಮಾನತಾಡಿದರು.ಭಾರತ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ಮತ್ತು ಬದಲಾವಣೆ ತರುವ 'ರಾಷ್ಟ್ರೀಯ ಶಿಕ್ಷಣ ನೀತಿ-2020'ರ ಪ್ರಮುಖ ಪ್ರಕ್ರಿಯೆಗಳು ಕರ್ನಾಟಕದಲ್ಲಿ ನಡೆದಿವೆ. ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲೇ ನಡೆದಿರುವುದು ಹೆಮ್ಮೆಯ ಸಂಗತಿ ಎಂದು ಇದೇ ವೇಳೆ ಹೇಳಿದರು.


ಭಾರತ ಮೂಲತಃ ಜ್ಞಾನದ ರಾಷ್ಟ್ರವಾಗಿದೆ. ಆದರೆ, ಬ್ರಿಟೀಷರು ಸೇರಿದಂತೆ ಕೆಲ ವ್ಯಕ್ತಿಗಳ ದುರುದ್ದೇಶದಿಂದ ಭಾರತೀಯ ಶಿಕ್ಷಣದ ಮೂಲ ಉದ್ದೇಶ ಮತ್ತು ಸ್ವರೂಪವನ್ನು ಕಳೆದುಕೊಳ್ಳಬೇಕಾಯಿತು. ಬ್ರಿಟೀಷರು ತಮ್ಮ ಅನುಕೂಲಕ್ಕಾಗಿ ಭಾರತದ ಶಿಕ್ಷಣ ವ್ಯವಸ್ಥೆ ಮತ್ತು ಪಠ್ಯಕ್ರಮವನ್ನು ಸಿದ್ಧಪಡಿಸಿದ್ದರು. ಆದರೆ, ಈಗ ರಾಷ್ಟ್ರೀಯ ಶಿಕ್ಷಣ ನೀತಿ-2020 ಮೂಲಕ ಭಾರತದ ಶಿಕ್ಷಣ ವ್ಯವಸ್ಥೆ ಸರಿ ದಾರಿಗೆ ಬರುತ್ತಿದೆ. ಈ ಮೂಲಕ ಅಮೂಲಾಗ್ರ ಬದಲಾವಣೆಯಾಗಿ ರಾಷ್ಟ್ರದ ಪ್ರತಿ ಪ್ರಜೆ, ಪ್ರತಿ ಕ್ಷೇತ್ರದ ಅಭಿವೃದ್ಧಿಗೆ ನಾಂದಿಯಾಡಲಿದೆ ಎಂದು ನಾಗೇಶ್ ತಿಳಿಸಿದರು.



ರಾಜ್ಯದ ಶಿಕ್ಷಣ ಇಲಾಖೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಸಜ್ಜಾಗಿದೆ. ಈ ಕುರಿತು ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎನ್‌ಇಪಿಯಲ್ಲಿ ತೊಡಗಿಸಿಕೊಂಡಿರುವ ತಜ್ಞರು ಕೂಡ ಕರ್ನಾಟಕದ ಸಿದ್ಧತೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯದ ಶಿಕ್ಷಣ ಇಲಾಖೆಗೆ ಸಂದ ಗೌರವ ಎಂದು ಸಚಿವ ನಾಗೇಶ್ ಹೇಳಿದರು.


ಉನ್ನತ ಶಿಕ್ಷಣ ಸಚಿವರಾದ ಡಾ. ಸಿ. ಎನ್. ಅಶ್ವತ್ಥನಾರಾಯಣ, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಚಾಲನಾ ಸಮಿತಿ ಅಧ್ಯಕ್ಷರಾದ ಡಾ. ಕೆ. ಕಸ್ತೂರಿರಂಗನ್, ಕೇಂದ್ರ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕಾರ್ಯದರ್ಶಿ ಕೆ. ಅನಿತಾ ಉಪಸ್ಥಿತರಿದ್ದರು.








Post a Comment

Previous Post Next Post