ವಿಜಯನಗರದಲ್ಲಿ ಚುನಾವಣೆ ರಣಕಹಳೆ ಮೊಳಗಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ವಿಜಯನಗರದಲ್ಲಿ ಚುನಾವಣೆ ರಣಕಹಳೆ ಮೊಳಗಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

*ಕರ್ನಾಟಕದ ಭವ್ಯ ಭವಿಷ್ಯ ನಿರ್ಮಿಸಲು ಸಿದ್ದರಾಗುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ*


ವಿಜಯನಗರ, ಏಪ್ರಿಲ್ 17: ವಿಜಯನಗರದಲ್ಲಿ  ನಡೆದ ಭಾರತೀಯ ಜನತಾ ಪಕ್ಷದ ವಿಜಯನಗರ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ  ಮುಖ್ಯಮಂತ್ರಿ   ಬಸವರಾಜ ಬೊಮ್ಮಾಯಿ ಅವರು ಚುನಾವಣಾ ರಣಕಹಳೆಯನ್ನು ಮೊಳಗಿಸಿದರು.

ವಿಜಯನಗರ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

 ವಿಜಯನಗರದ ಪುಣ್ಯಭೂಮಿಯಿಂದ  ನ್ಹಾಯಸಮ್ಮತ, ಸಕಾರಾತ್ಮಕ ಪ್ರಜಾಪ್ರಭುತ್ವದ ಸಮರವನ್ನು ಸಾರಿದ್ದೇವೆ. ನಿಮ್ಮೆಲ್ಲರ ಪರಿಶ್ರಮ, ನಮ್ಮ ನಾಯಕರಾದ ನರೇಂದ್ರ ಮೋದಿಯವರ ಕಾರ್ಯಕ್ರಮ ಹಾಗೂ ನಾಯಕತ್ವದಲ್ಲಿ ನಾವೆಲ್ಲರೂ ಮುನ್ನಡೆಯೋಣ.  ಹೆಜ್ಜೆಗೆ ಹೆಜ್ಜೆ, ಹೆಗಲಿಗೆ ಹೆಗಲು ಕೊಟ್ಟು ನಡೆಯೋಣ.ವಿಜಯ ನಮ್ಮದು, ಕರ್ನಾಟಕದ್ದು, ಕರ್ನಾಟಕದ ಭವ್ಯ ಭವಿಷ್ಯದ್ದು. ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಿಸಲು ಸಿದ್ದರಾಗುವಂತೆ ಕರೆ ನೀಡಿದರು. 


ರೈತರು, ಮಹಿಳೆಯರು, ರಾಜ್ಯ, ರಾಷ್ಟ್ರದ ಅಖಂಡತೆ, ನ್ಯಾಯಸಮ್ಮತ ಆಡಳಿತ, ಕಾನೂನು ಸುವ್ಯವಸ್ಥೆಗಳ ಆಧಾರದ ಮೇಲೆ ನಾವು ಜನರ ಬಳಿಗೆ  ಹೋಗುತ್ತೇವೆ. ಸಕಾರಾತ್ಮಕ ಚಿಂತನೆಯಿಂದ ನಮ್ಮ ಕೆಲಸವನ್ನು ಜನರ ಮುಂದಿಟ್ಟು, ಅದರ ಆಧಾರದ ಮೇಲೆ ಜನರ ಪ್ರೀತಿ, ವಿಶ್ವಾಸವನ್ನು ಗಳಿಸಿ, ನಿಮ್ಮ ಮನ ಗೆದ್ದು, ಪ್ರತಿಯೊಬ್ಬರ ಹೃದಯದಲ್ಲಿ, ಕಮಲವನ್ನು ಅರಳಿಸುತ್ತೇವೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ  ಕಮಲವನ್ನು ಅರಲಿಸಲಾಗುವುದು. ಅದಕ್ಕಾಗಿ ನಿಮ್ಮ ಬೆಂಬಲ ಇರಬೇಕು ಎಂದರು.

ವಿಜಯನಗರದ ನಡೆದ ಎರಡು ದಿನಗಳ ಸಮಾವೇಶದಲ್ಲಿ ಹೊಸ ದಿಕ್ಸೂಚಿ, ದಾರಿ, ವಿಶ್ವಾಸ ದೊರೆಯುವ ಬಗ್ಗೆ ನಮಗೆ ಶಕ್ತಿ ತುಂಬಿದೆ. 2023 ರಲ್ಲಿ ಭಾ.ಜ.ಪ ಮತ್ತೆ ಕರ್ನಾಟಕದಲ್ಲಿ ಉದಯಿಸಲಿರುವುದು ಸತ್ಯ ಎಂದರು. 

*ಭಾರತದ ಭವಿಷ್ಯ ನಿರ್ಮಿಸುವ ನಾಯಕ*
ನಮ್ಮ ಪಕ್ಷದ ಶಕ್ತಿ ನಮ್ಮ ನೀತಿ, ಕಾರ್ಯಕರ್ತರು ಮತ್ತು ನಾಯಕತ್ವ. ರಾಷ್ಟ್ರ ಮಟ್ಟದಲ್ಲಿ ನಮ್ಮ ನೆಚ್ಚಿನ ನಾಯಕ ನರೇಂದ್ರ ಮೋದಿಯವರ ನಾಯಕತ್ವ, ವಿಶ್ವವ್ಯಾಪಿ ನಾಯಕತ್ವವನ್ನು ಒಪ್ಪಿಕೊಂಡಿದೆ. ಭಾರತದ ಭವಿಷ್ಯ ನಿರ್ಮಿಸುವ ನಾಯಕ ನರೇಂದ್ರ ಮೋದಿಯವರು ಎಂದು  ಜನ ಸಾರಿ ಹೇಳುತ್ತಿದ್ದಾರೆ ಎಂದರು. ಈ ಕಾರ್ಯಕ್ರಮ ಮತ್ತು ನಾಯಕತ್ವದ ಮೂಲಕ ನಾವು ರಾಷ್ಟ್ರ ಮತ್ತು ರಾಜ್ಯದ ಭವ್ಯ ಭವಿಷ್ಯ ನಿರ್ಮಿಸಲು ಹೊರಟಿದ್ದೇವೆ ಎಂದರು. 

*ಹೊಸ ಮನ್ವಂತರ*
ಈ ಪಯಣ ನಮ್ಮ ಹಿರಿಯರ ತ್ಯಾಗ , ಬಲಿದಾನ, ಪರಿಶ್ರಮದಿಂದ ದೊರೆತದ್ದು.  ಇಡೀ ಭಾರತದಲ್ಲಿ ಹೊಸ ಮನ್ವಂತರವನ್ನು ಕಟ್ಟಿಕೊಟ್ಟಿದ್ದಾರೆ.  ನಮ್ಮೆಲ್ಲರ ಜವಾಬ್ದಾರಿ , ಹೊಸ ಭರವಸೆಯ ರೀತಿ ಕರ್ನಾಟಕ ರಾಜ್ಯವನ್ನು  ಮಾದರಿ, ಸುಭಿಕ್ಷ, ಸಂಪದ್ಭರಿತ ರಾಜ್ಯವಾಗಿ ಮಾಡಲು ಸಂಕಲ್ಪ.ಮಾಡಿ, ಹಿರಿಯರ ನಿರೀಕ್ಷೆ ಗೆ ತಕ್ಕ ಹಾಗೆ ಪಕ್ಷವನ್ನು ಸಂಘಟಿಸಿ, 2023 ರಲ್ಲಿ ವಿಜಯಪಾತಾಕೆಯನ್ನು ಹಾರಿಸಬೇಕು ಎಂದರು. 

*ಭ್ರಷ್ಟಾಚಾರ ರಾಷ್ಟ್ರಕ್ಕೆ ಕಾಂಗ್ರೆಸ್ಸಿನ ಕೊಡುಗೆ*
ನರೇಂದ್ರ ಮೋದಿಯವರು ರಾಷ್ಟ್ರದ ಪ್ರಧಾನಿಯಾಗುವ ಮುನ್ನ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. 2ಜಿ, 3 ಜಿ, ರಕ್ಷಣಾ ಸಾಮಾಗ್ರಿಗಳ ಖರೀದಿಯಲ್ಲಿ, ಕಲ್ಲಿದ್ದಲು, ಭೂಮಿ ಕೆಳಗೆ, ಮೇಲೆ, ಆಕಾಶದಲ್ಲಿ ಭ್ರಷ್ಟಾಚಾರವಿತ್ತು.ಇದು ಈ ರಾಷ್ಟ್ರಕ್ಕೆ ಕಾಂಗ್ರೆಸ್ಸಿನ ಕೊಡುಗೆ. ಇಷ್ಟು ದೊಡ್ಡ ಪ್ರಮಾಣದ ಭ್ರಷ್ಟಾಚಾರ ಮಾಡಿ, ದೇಶಕ್ಕೆ ಆರ್ಥಿಕ ಹಾನಿಯನ್ನು ಉಂಟು ಮಾಡಿ, ದೇಶದ ಸುರಕ್ಷತೆಯನ್ನು ವಿದೇಶಿಯರ ಮುಂದೆ  ಕ್ಷೀಣವಾಗುವಂತೆ ಮಾಡಿ, ಭಾರತವನ್ನು ಅತ್ಯಂತ ದುರ್ಬಲ ರಾಷ್ಟ್ರವನ್ನಾಗಿ ಮಾಡಿದ ಶ್ರೇಯಸ್ಸು  ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರ್ಕಾರಕ್ಕೆ  ಸಲ್ಲುತ್ತದೆ. ಕಾಂಗ್ರೆಸ್ ಪರಿಸ್ಥಿತಿ ಏನಾಯಿತು. ವಿರೋಧಪಕ್ಷವೂ ಆಗಲು ಸಾಧ್ಯವಾಗಿಲ್ಲ.

ಆದ್ದರಿಂದ ಜನ ಅವರನ್ನು ಕ್ಷಮಿಸಲಿಲ್ಲ. 2014 ರ ಚುನಾವಣೆಯಲ್ಲಿ ದಿಟ್ಟ , ದಕ್ಷ, ರಾಷ್ಟ್ರವನ್ನು ಉಳಿಸುವ, ಬೆಳೆಸುವ  ನಾಯಕತ್ವಕ್ಕೆ ಮನ್ನಣೆನೆಯನ್ನು  ನೀಡಿದ್ದಾರೆ. ನರೇಂದ್ರ ಮೋದಿಯವರ ಪ್ರಾಮಾಣಿಕತೆ, ದೇಶಪ್ರೇಮ, ಬಡವರ, ರೈತರ ಬಗೆಗಿನ ಕಳಕಳಿ, ಕಾರ್ಯಕ್ರಮ ಗಳನ್ನು ಎಲ್ಲರೂ ಮೆಚ್ಚಿಕೊಂಡು 2019 ರಲ್ಲಿ ಮತ್ತೊಮ್ಮೆ ಮನ್ನಣೆ ನೀಡಿದ್ದಾರೆ ಎಂದರು.

*ಕಾಂಗ್ರೆಸ್ ನ ಕೆಟ್ಟ ಆಡಳಿತ :*
2013 ರಿಂದ 2018 ರವರೆಗಿನ ಐದು ವರ್ಷ ಕರ್ನಾಟಕದ ಜನತೆ ಅತ್ಯಂತ ಕೆಟ್ಟ ಆಡಳಿತವನ್ನು ಅನುಭವಿಸಬೇಕಾಯಿತು. ಎಲ್ಲ ಜನವಿರೋಧಿ ಕೆಲಸಗಳು, ಅವರ ಯಾವ ಕೆಲಸಗಳೂ ಜನರನ್ನು ತಲುಪಲಿಲ್ಲ. ಬಡತನ, ನಿರುದ್ಯೋಗ ಹೆಚ್ಚಾಯಿತು. ಕೋಮುಗಲಭೆಯೂ ಹೆಚ್ಚಾಯಿತು.  ಹಿಂದೂ ಸಂಘಟನೆಯ ಯುವಕರ ಕಗ್ಗೊಲೆಯಾಯಿತು. ಮಂಗಳೂರು, ಮೈಸೂರು, ಶಿರಸಿ, ಬೆಂಗಳೂರಿನಲ್ಲಿ ಮರುಕಳಿಸಿತು. ಎಲ್ಲೆಲ್ಲೂ ಹಿಂಸೆ, ಕೊಲೆ , ಸುಲಿಗೆ, ಇದಕ್ಕೆ ಕಾರಣರಾದ ಪಿಎಫ್ ಐ, ಸಂಸ್ಥೆಯ ಕೇಸುಗಳನ್ನು ಅಂದಿನ ಸಿದ್ಧರಾಮಯ್ಯ ಸರ್ಕಾರ  ಕೇಸುಗಳನ್ನು ವಾಪಸ್ಸು ಪಡೆದರು. ರಾಜ್ಯದಲ್ಲಿ ಕ್ಷೋಭೆ ಉಂಟು ಮಾಡಿದ ಸಂಸ್ಥೆಗಳನ್ನು ಬೆಂಬಲಿಸಿ 200 ಕ್ಕೂ ಹೆಚ್ಚು ಕೇಸುಗಳನ್ನು ಸರ್ಕಾರ ಹಿಂಪಡೆಯಿತು. ಕಾಂಗ್ರೆಸ್ ನವರು ಈ ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ  ಶಕ್ತಿಗಳಿಗೆ ವೋಟ್ ಬ್ಯಾಂಕಿಗಾಗಿ ಕುಮ್ಮಕ್ಕು ಕೊಡುತ್ತಾರೆ ಎಂದರು.

*ಕಾಂಗ್ರೆಸ್ ಗೆ ಅಧಿಕಾರ, ವೋಟ್ ಬ್ಯಾಂಕ್ ಮುಖ್ಯ :*
ವೋಂಟ್ ಬ್ಯಾಂಕ್ ಗಾಗಿ ರಾಜಕಾರಣಕ್ಕಾಗಿ ರಾಜ್ಯದಲ್ಲಿ ಕ್ಷೋಭೆ ಮಾಡುವ ರೀತಿಯಲ್ಲಿ ಆಡಳಿತ ನಡೆಸಿದರು. ಆಡಳಿತದಲ್ಲಿ ನಿಯಂತ್ರಣ ಕಳೆದುಕೊಂಡು ದೇಶದ್ರೋಹಿಗಳಿಗೆ ಬೆಂಬಲ ನೀಡಿದ್ದರು. ಬೆಂಗಳೂರಿನ ಡಿ.ಜೆ ಹಳ್ಳಿ ಕೆಜಿಹಳ್ಳಿ ಪ್ರಕರಣದಲ್ಲಿ ಪೊಲೀಸ್ ಸ್ಟೇಷನ್ ಮೇಲೆ ದಾಳಿ, ಕಾಂಗ್ರೆಸ್ ಶಾಸಕರ ಮನೆಗೆ ಬೆಂಕಿ ಇಡಲಾಯಿತು.  ಇದರ ಬಗ್ಗೆ ಒಂದು ಮಾತೂ ಆಡಲು ಪಕ್ಷಕ್ಕೆ ನೈತಿಕತೆ ಇಲ್ಲ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಅವರಿಗೆ ಬೇಕಾಗಿಲ್ಲ.  ಕಾಂಗ್ರೆಸ್ ಗೆ ಅಧಿಕಾರ, ವೋಟ್ ಬ್ಯಾಂಕ್ ಮುಖ್ಯ. ಹುಬ್ಬಳ್ಳಿಯ ಪೊಲೀಸ್ ಠಾಣೆಯ ಮೇಲೆ ದಾಳಿಯಾದಾಗ ಇವರಿಗೆ ಧ್ವನಿ ಇಲ್ಲ.  ಹಿಜಾಬ್ ಪ್ರಕರಣವನ್ನು ಮೊಳಕೆಯಲ್ಲೇ ಚಿವುಟಿ ಹಾಕಬಹುದಿತ್ತು. ಆ ಶಕ್ತಿಗೆ ನ್ಯಾಯಾಲಯದಲ್ಲಿ ನಿಂತು ಅವರ ಪರ ವಾದ ಮಾಡುವುದಕ್ಕೆ ಅವರಿಗೆ ನಾಚಿಕೆ ಆಗುವುದಿಲ್ಲವೇ?. ಕಾಂಗ್ರೆಸ್ ಪಕ್ಷದ ವಕೀಲರು ಅವರ ಪರವಾಗಿ ವಾದ ಮಾಡುತ್ತಾರೆ. ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕೆಂಬ ಬಗ್ಗೆ ಒಂದೂ ಶಬ್ಧವನ್ನೂ ಹೇಳಲಿಲ್ಲ. ಕಾನೂನಿನ ಬಗ್ಗೆ ಮಾತನಾಡುವವರು ಕೋರ್ಟಿನ ಆದೇಶ ಪಾಲನೆ ಮಾಡದಿದ್ದರೆ ರಾಜ್ಯದಲ್ಲಿ ಶಾಂತಿ ಉಳಿಯಲು ಸಾಧ್ಯವೇ.  ಕಾಂಗ್ರೆಸ್ ನವರ ದುರಾಡಳಿತ ಬಗ್ಗೆ ಮಾತನಾಡಲು ಎರಡು ತಾಸು ಬೇಕು ಎಂದರು.

*ಭ್ರಷ್ಟಾಚಾರವೇ ಕಾಂಗ್ರೆಸ್ ನವರ ನೀತಿ ಮತ್ತು ಕಾರ್ಯಕ್ರಮ :*
ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್. ದೇಶದ ಮೊದಲ  ಭ್ರಷ್ಟಾಚಾರ ರಕ್ಷಣಾ ವಲಯದ ಜೀಪ್ ಖರೀದಿಯಲ್ಲಿ.ನೆಹರೂ ಕಾಲದಿಂದಲೂ ಭ್ರಷ್ಟಾಚಾರ ನಡೆದುಕೊಂಡು ಬಂದಿದೆ. ಭ್ರಷ್ಟಾಚಾರವೇ ಕಾಂಗ್ರೆಸ್ ನವರ ನೀತಿ ಮತ್ತು ಕಾರ್ಯಕ್ರಮ.  ತಹಶೀಲ್ದಾರ ಕಚೇರಿಯಿಂದ ವಿಧಾನಸಭೆಯವರೆಗೂ ಇವರ ಏಜೆಂಟ್ ಗಳು ಇರುತ್ತಾರೆ. ಕುಡಿಯುವ ನೀರಿನ ಘಟಕ, ಬಡವರ ಅಕ್ಕಿ, ಮನೆ ನಿರ್ಮಾಣ, ಎಸ್ ಸಿ ಎಸ್ ಟಿ ಸವಲತ್ತುಗಳಲ್ಲಿ ಭ್ರಷ್ಠಾಚಾರ,   ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ಎನ್ನುವುದು ಅಕ್ರಮ ಅಲ್ಲ, ಸಕ್ರಮ ಆಯಿತು. ಇವರು ನಮಗೆ ಪಾಠ ಹೇಳುತ್ತಾರೆ. ಭ್ರಷ್ಟಾಚಾರದ ವಿರುದ್ಧ ಆಂದೋಲನ, ಪ್ರವಾಸ  ಮಾಡುವ ಮೂಲಕ  ಅವರ ಭ್ರಷ್ಟ ಪಾಪವನ್ನು ಮುಚ್ಚಿಕೊಳ್ಳವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿಸಿದರು.

Post a Comment

Previous Post Next Post