ಶರ್ತದ ಮೂಲಕ ಮೋಸ ಮಾಡುವ ಕಾಂಗ್ರೆಸ್ ಸರಕಾರ - ಛಲವಾದಿ ನಾರಾಯಣಸ್ವಾಮಿ,, ಬಿಜೆಪಿ ನೂತನ ಶಾಸಕರ, ಪರಾಜಿತ ಅಭ್ಯರ್ಥಿಗಳ, ಕೋರ್ ಕಮಿಟಿ ಸಭೆ



ಶರ್ತದ ಮೂಲಕ ಮೋಸ ಮಾಡುವ ಕಾಂಗ್ರೆಸ್ 
ಸರಕಾರ - ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ಕಾಂಗ್ರೆಸ್ ಸಚಿವ ಚಲುವರಾಯಸ್ವಾಮಿ ಆವರು ಕಾಂಗ್ರೆಸ್ ಭರವಸೆಗಳು ಚುನಾವಣಾ ಗಿಮಿಕ್ ಎಂದು ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ ಎಂದು ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನೀವು ಐದು ಗ್ಯಾರಂಟಿ ಕೊಟ್ಟಿದ್ದೀರಿ. ಅವನ್ನು ಈಡೇರಿಸಿ. ಎಲ್ಲರಿಗೂ ಉಚಿತ ಕೊಡಿ. ಶರ್ತ ಬೇಡ ಎಂದು ಆಗ್ರಹಿಸಿದರು. ಶರ್ತದ ಮೂಲಕ ಮೋಸ ಮಾಡುತ್ತಿದ್ದೀರಲ್ಲವೇ ಎಂದು ಆಕ್ಷೇಪ ಸೂಚಿಸಿದರು.
ಹಿಂದೆ ಪಡೆದ ಡೆಪಾಸಿಟ್ ಕುರಿತು ಸರ್ಕಾರ ಉತ್ತರಿಸಬೇಕು. ಅದರ ವಿವರ ಕೊಡಿ ಎಂದು ಒತ್ತಾಯಿಸಿದರು. ಫಿಕ್ಸೆಡ್ ಚಾರ್ಜ್ ಹೆಚ್ಚಳ ಆಕ್ಷೇಪಾರ್ಹ. ಇದು ವಂಚನೆಯ ಕೆಲಸ ಎಂದು ಟೀಕಿಸಿದರು.
ಗ್ಯಾರಂಟಿ ಜಾರಿ ಬಗ್ಗೆ ಶ್ವೇತಪತ್ರ ಹೊರಡಿಸಿ. ದಲಿತರ ಅನುದಾನದ ಬಳಕೆ ವಿವರ ಕೊಡಿ ಎಂದರು.

(ಕರುಣಾಕರ ಖಾಸಲೆ)
 ಬಿಜೆಪಿ ನೂತನ ಶಾಸಕರ, 
ಪರಾಜಿತ ಅಭ್ಯರ್ಥಿಗಳ, ಕೋರ್ ಕಮಿಟಿ ಸಭೆ : ಎನ್ ರವಿಕುಮಾರ್ 
ಬೆಂಗಳೂರು: ನೂತನವಾಗಿ ಚುನಾಯಿತರಾದ ಬಿಜೆಪಿ ಶಾಸಕರ 66 ಶಾಸಕರ ಮತ್ತು ಪರಾಜಿತ ಅಭ್ಯರ್ಥಿಗಳ ಸಭೆಯು ನಾಳೆ (8.6.2023) ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ತಿಳಿಸಿದ್ದಾರೆ. 
ನೂತನ ಶಾಸಕರ ಸಭೆಯು ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ ಮಧ್ಯಾಹ್ನದ ನಂತರ 3.00 ಗಂಟೆಗೆ ಎಲ್ಲಾ ಪರಾಜಿತ ಅಭ್ಯರ್ಥಿಗಳ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಎಲ್ಲಾ ಪರಾಜಿತ ಅಭ್ಯರ್ಥಿಗಳು ಭಾಗವಹಿಸುವಂತೆ ಅವರು ವಿನಂತಿಸಿದ್ದಾರೆ. 
ಸಂಜೆ ರಾಜ್ಯ ಕೋರ್ ಕಮಿಟಿ ಸಭೆ
ಸಂಜೆ 6.00 ಗಂಟೆಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ ಎಂದು ಅವರು ತಿಳಿಸಿದ್ದು, ನಾಳೆ ನಡೆಯುವ ಎಲ್ಲಾ ಸಭೆಗಳಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ರಾಜ್ಯದ ಪ್ರಭಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಆರ್. ಅಶೋಕ್ ಅವರು ಭಾಗವಹಿಸಿ ಸಭೆಯಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಸಭೆಯಲ್ಲಿ ರಾಜ್ಯದ ಚುನಾವಣೆಯ ಕುರಿತು ಅವಲೋಕನ, ಕೇಂದ್ರ ಸರ್ಕಾರದ 9 ವರ್ಷಗಳ ಯೋಜನೆ, ಜುಲೈ 03 ರಂದು ನಡೆಯಲಿರುವ ಅಧಿವೇಶನ, ತೆರವಾಗಿರುವ 3 ಸ್ಥಾನಗಳ ವಿಧಾನ ಪರಿಷತ್ ಚುನಾವಣೆ ಇತ್ಯಾದಿಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ. 


(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ

Post a Comment

Previous Post Next Post