ದೇಶಾದ್ಯಂತ ಎಥೆನಾಲ್ ಜೈವಿಕ ಇಂಧನದ 400 ಪಂಪ್ಗಳನ್ನು ಸ್ಥಾಪಿಸಲಾಗಿದೆ: ಕೇಂದ್ರ ಸಚಿವ ನಿತಿನ್ ಗಡ್ಕರಿ
ದೇಶಾದ್ಯಂತ ಎಥೆನಾಲ್ ಜೈವಿಕ ಇಂಧನದ 400 ಪಂಪ್ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇಂದು ಹೇಳಿದ್ದಾರೆ. ಇಂದು ನವದೆಹಲಿಯಲ್ಲಿ ಭಾರತೀಯ ಕೈಗಾರಿಕೆಗಳ ಒಕ್ಕೂಟ ಆಯೋಜಿಸಿದ್ದ ಬಯೋ ಎನರ್ಜಿ ಶೃಂಗಸಭೆ 2024ರಲ್ಲಿ ಅವರು ಮಾತನಾಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಮೂರು ವಿಭಿನ್ನ ಆಟೋಮೊಬೈಲ್ ಬ್ರಾಂಡ್ಗಳಿಂದ ಫ್ಲೆಕ್ಸ್-ಎಂಜಿನ್ ವಾಹನಗಳನ್ನು ಪ್ರಾರಂಭಿಸಲು ಸರ್ಕಾರ ಉದ್ದೇಶಿಸಿದೆ ಎಂದು ಹೈಲೈಟ್ ಮಾಡಿದರು.
CNG, ಎಥೆನಾಲ್ ಮತ್ತು ಮೀಥೇನ್ನಂತಹ ಜೈವಿಕ ಇಂಧನಗಳಾಗಿ ಪರಿವರ್ತಿಸಲು ತ್ಯಾಜ್ಯವನ್ನು ಬೇರ್ಪಡಿಸುವ ಅಗತ್ಯವನ್ನು ಸಚಿವರು ಮತ್ತಷ್ಟು ಒತ್ತಿ ಹೇಳಿದರು. ಜೈವಿಕ ಇಂಧನವು ದೇಶದಲ್ಲಿ ಆರ್ಥಿಕವಾಗಿ ಲಾಭದಾಯಕವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಈವೆಂಟ್ನಲ್ಲಿ ಮೊದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಭಾರತದ ಎಥೆನಾಲ್ ಮಿಶ್ರಣ ಉಪಕ್ರಮದ ಯಶಸ್ಸನ್ನು ಎತ್ತಿ ತೋರಿಸಿದರು, ಇದು 2014 ರಲ್ಲಿ ಶೇಕಡಾ 1.53 ರಿಂದ ಈ ವರ್ಷದ ವೇಳೆಗೆ ಯೋಜಿತ ಶೇಕಡಾ 15 ಕ್ಕೆ ಏರಿಕೆ ಕಂಡಿದೆ. 2025 ಕ್ಕೆ 20 ರಷ್ಟು ಮಿಶ್ರಣ ಮಾಡುವ ಗುರಿಯನ್ನು ಸರ್ಕಾರವು ಮುಂದಿಟ್ಟಿದೆ ಎಂದು ಅವರು ಹೇಳಿದರು.
ಎಥೆನಾಲ್ ಕಾರ್ಯಕ್ರಮದಿಂದ ಒಂದು ಲಕ್ಷದ ಆರು ಸಾವಿರದ ಎಪ್ಪತ್ತು ಕೋಟಿ ರೂಪಾಯಿಗೂ ಹೆಚ್ಚು ವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಈ ಉಪಕ್ರಮವು ಇಂಗಾಲದ ಹೊರಸೂಸುವಿಕೆಯನ್ನು ಐನೂರ ನಲವತ್ತನಾಲ್ಕು ಲಕ್ಷ ಮೆಟ್ರಿಕ್ ಟನ್ಗಳಷ್ಟು ಕಡಿಮೆ ಮಾಡಿದೆ ಮತ್ತು ಸುಮಾರು ನೂರ ಎಂಬತ್ತು ಲಕ್ಷ ಮೆಟ್ರಿಕ್ ಟನ್ಗಳ ಕಚ್ಚಾ ತೈಲದ ಪರ್ಯಾಯವನ್ನು ಸಾಧಿಸಿದೆ.
Post a Comment